ಫ್ಯಾಕ್ಟ್ಚೆಕ್: ಉರ್ದು ಭಾಷೆಯ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ₹100 ಕೋಟಿ ಮೀಸಲಿಟ್ಟಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ
ಉರ್ದು ಭಾಷೆಯ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ₹100 ಕೋಟಿ ಮೀಸಲಿಟ್ಟಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ

Claim :
ಉರ್ದು ಭಾಷೆಯ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ₹100 ಕೋಟಿ ಮೀಸಲಿಟ್ಟಿದೆFact :
ಕನ್ನಡ ಮಾಧ್ಯಮ ಶಾಲೆಗಳಿಗೆ ಸುಮಾರು 38,688 ಕೋಟಿ ಅನುದಾನ ನೀಡಿದ್ದು, ಅತಿ ಹೆಚ್ಚು ದಾಖಲಾತಿರುವ ಉರ್ದು ಶಾಲೆಗಳ ಅಭಿವೃದ್ಧಿಗಾಗಿ 100 ಕೋಟಿ ಅನುದಾನವನ್ನು ನೀಡಿದೆ
ಮಾರ್ಚ್ 7, 2025ರಂದು ಸಿಎಂ ಸಿದ್ದರಾಮಯ್ಯರವರು 16ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ಇತಿಹಾಸವನ್ನೇ ಬರೆದಿದ್ದು, ಈ ಬಾರಿ ಅವರ 2025-26 ನೇ ಸಾಲಿನ ಬಜೆಟ್ ಮಂಡನೆ ಬಹಳ ದೊಡ್ಡ ಪರ – ವಿರೋಧದ ಚರ್ಚೆಯನ್ನು ಹುಟ್ಟು ಹಾಕಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷ ಇದೊಂದು ಉತ್ತಮವಾದ ಬಜೆಟ್ ಎಂದಿದ್ದು, ವಿಪಕ್ಷ ಬಿಜೆಪಿ ಬಜೆಟ್ ಕುರಿತು ಟೀಕೆಯನ್ನು ಮಾಡಿದೆ. ಹೀಗಾಗಿ 2025-26ನೇ ಸಾಲಿನ ಬಜೆಟ್ ಸಾರ್ವಜನಿಕ ವಲಯದಲ್ಲೂ ಚರ್ಚೆಯನ್ನು ಹುಟ್ಟುಹಾಕಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸೇರಿದಂತೆ ವಿವಿಧ ಬಲಪಂಥೀಯ ಬೆಂಬಲಿಗರ ಪೋಸ್ಟ್ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಕರ್ನಾಟಕ ಸರ್ಕಾರ 2025-26ರ ಬಜೆಟ್ನಲ್ಲಿ ಭಾಷೆಯ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿರುವ ಲೆಕ್ಕವನ್ನು ಉಲ್ಲೇಖಿಸಲಾಗಿದೆ. ವೈರಲ್ ಪೊಸ್ಟ್ನಲ್ಲಿ ಉರ್ದು ಭಾಷೆಗೆ 100 ಕೋಟಿ ಅನುದಾನ ನೀಡಲಾಗಿದ್ದು, ಉಳಿದ ಇತರೆ ಭಾಷೆಗಳಿಗೆ ಕೇವಲ 32 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ ಎಂಬ ಶೀರ್ಷಿಕೆಯನ್ನೀಡಿ ಪೊಸ್ಟ್ನ್ನು ಹಂಚಿಕೊಳ್ಳುತ್ತಿದ್ದಾರೆ.
ಮೇ 26, 2025ರಂದು ಬಿಜೆಪಿ ಕರ್ನಾಟಕ ಎಕ್ಸ್ ಖಾತೆಯಲ್ಲಿ ʼಉರ್ದು ಪ್ರಿಯ ಸಿದ್ದರಾಮಯ್ಯನವರಿಂದ ಕನ್ನಡಿಗರಿಗೆ ಮತ್ತೊಂದು ಮಹಾ ದ್ರೋಹ! ಉರ್ದು ಭಾಷೆಯ ಅಭಿವೃದ್ಧಿಗೆ ₹100 ಕೋಟಿ ಮೀಸಲು, ಕನ್ನಡ ಭಾಷೆಗೆ ಕೇವಲ ₹32 ಕೋಟಿ. ಸಿಎಂ @siddaramaiah ಅವರೆ, ಕನ್ನಡ ಭಾಷೆಯ ಮೇಲೆ ಏಕಿಷ್ಟು ಅಸಡ್ಡೆ! ತುಳು, ಕೊಂಕಣಿ, ಕೊಡವ ಹಾಗು ಅರೆಭಾಷೆ ನಮ್ಮ ಕರ್ನಾಟಕದ ಭಾಷೆಗಳಲ್ಲವೇ?ʼ ಎಂಬ ಶೀರ್ಷಿಕೆಯನ್ನೀಡಿ ಪೊಸ್ಟ್ ಮಾಡಲಾಗಿದೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಮತ್ತೊಂದು ಎಕ್ಸ್ ಖಾತೆಯಲ್ಲಿ ʼಉರ್ದು ಪ್ರಿಯ ಸಿದ್ದರಾಮಯ್ಯ ಅವರು ಕನ್ನಡಿಗರಿಗೆ ಮಹಾ ದ್ರೋಹ ಎಸಗಿದ್ದಾರೆ. ಉರ್ದು ಭಾಷೆಯ ಅಭಿವೃದ್ಧಿಗೆ ₹100 ಕೋಟಿ ಮೀಸಲಿಸಿರಿದ ಕಾಂಗ್ರೆಸ್ ಸರ್ಕಾರ ಕನ್ನಡ ಭಾಷೆಗೆ ಮಾತ್ರ ಕೇವಲ ₹32 ಕೋಟಿ ಮೀಸಲಿರಿಸಿದೆ. ಕಾಂಗ್ರೆಸ್ಸಿಗರಿಗೆ, ಕನ್ನಡ ಭಾಷೆಯ ಮೇಲೆ ಏಕಿಷ್ಟು ಅಸಡ್ಡೆ?ʼ ಎಂಬ ಶೀರ್ಷಿಕೆಯನ್ನೀಡಿ ಪೊಸ್ಟ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
27, ಮೇ 2025ರಂದು ಎಕ್ಸ್ ಖಾತೆದಾರರೊಬ್ಬರು ʼಇವರಿಗೆ ವೋಟ್ ಹಾಕಿ ಗೆಲ್ಲಿಸಿದ ತಪ್ಪಿಗೆ ಕರ್ನಾಟಕ ರಾಜ್ಯ ಬದಲು ಉರ್ದುರಾಜ್ಯ ಮಾಡಿದ ದುರುಳರು. ಉರ್ದು ಪ್ರಿಯ ಸಿದ್ದರಾಮಯ್ಯನವರಿಂದ ಕನ್ನಡಿಗರಿಗೆ ಮತ್ತೊಂದು ಮಹಾ ದ್ರೋಹ! ಉರ್ದು ಭಾಷೆಯ ಅಭಿವೃದ್ಧಿಗೆ ₹100 ಕೋಟಿ ಮೀಸಲು, ಕನ್ನಡ ಭಾಷೆಗೆ ಕೇವಲ ₹32 ಕೋಟಿʼ ಎಂಬ ಶೀರ್ಷಿಕೆಯನ್ನೀಡಿ ಪೊಸ್ಟ್ ಮಾಡಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
27, ಮೇ 2025ರಂದು ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿಯೂ ವೈರಲ್ ಆದ ಶೀರ್ಷಿಕೆಯನ್ನೀಡಿ ಪೊಸ್ಟ್ ಮಾಡಿರುವುದನ್ನು ನೋಡಬಹುದು.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಕರ್ನಾಟಕ ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳಿಗೆ ಸುಮಾರು 38,688 ಕೋಟಿ ಅನುದಾನ ನೀಡಿದ್ದು, ಅತಿ ಹೆಚ್ಚು ದಾಖಲಾತಿರುವ ಉರ್ದು ಶಾಲೆಗಳ ಅಭಿವೃದ್ಧಿಗಾಗಿ 100 ಕೋಟಿ ಅನುದಾನವನ್ನು ನೀಡಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ಕರ್ನಾಟಕ ಬಜೆಟ್ 2025-2026 ಎಂಬ ಕೀವರ್ಡ್ನಿಂದ ಹುಡುಕಾಟ ನಡೆಸಿದಾಗ ಕರ್ನಾಟಕ ಬಜೆಟ್ 2025-26 ಪಿಡಿಎಫ್ ಪ್ರತಿಯೊಂದು ದೊರೆಯಿತು. ಇದರಲ್ಲಿ ಯಾವ ಯಾವ ಯೋಜನೆ ಅಥವಾ ವಲಯಕ್ಕೆ ಎಷ್ಟೆಷ್ಟು ಹಣ ನೀಡಲಾಗಿದೆ ಎನ್ನುವ ವಿವರವನ್ನು ನಾವೀ ಪಿಡಿಎಫ್ ಪ್ರತಿಯಲ್ಲಿ ನೋಡಬಹುದು.
41ನೇ ಪುಟದ 105-121ನೇ ಅಂಶದಲ್ಲಿ ರಾಜ್ಯ ಸರ್ಕಾರ ಮಂಡಿಸಿರುವ 2025-26 ನೇ ಸಾಲಿನ ಬಜೆಟ್ನಲ್ಲಿ, ರಾಜ್ಯ ಸರ್ಕಾರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆಗೆ 34,438 ಕೋಟಿ ರೂಪಾಯಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಇತರ ಇಲಾಖೆಗಳಿಗೆ 4,150 ಕೋಟಿ ರೂಪಾಯಿ ಅನುದಾನವನ್ನು ನೀಡಿದ್ದು, ಕನ್ನಡ ಭಾಷೆಯ ಶಾಲೆಗಳಿಗಾಗಿಯೇ ರಾಜ್ಯ ಸರ್ಕಾರ ಒಟ್ಟು 38,688 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದನ್ನು ನಾವಿಲ್ಲಿ ನೋಡಬಹುದು. ಈ ಮೂಲಕ ರಾಜ್ಯ ಸರ್ಕಾರ ಕನ್ನಡ ಮಾಧ್ಯಮದ ಶಾಲೆಗಳಿಗಾಗಿ ಅತಿ ಹೆಚ್ಚು ಅನುದಾನ ನೀಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಇದರ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೂಡ ರಾಜ್ಯ ಸರ್ಕಾರ ಅನುದಾನ ನೀಡಿರುವುದು ತಿಳಿದುಬಂದಿದೆ
ಉರ್ದು ಶಾಲೆಗಳಿಗೆ ಅತಿಹೆಚ್ಚು ಅನುದಾನ ನೀಡಲಾಗಿದೆ ಎಂಬ ಕುರಿತು ಪರಿಶೀಲನೆ ನಡೆಸಲು 2025-26ರ ಬಜೆಟ್ ಅನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿದಾಗ 79ನೇ ಪುಟದಲ್ಲಿನ 212-217ನೇ ಅಂಶದಲ್ಲಿ ಶಿಕ್ಷಣ ಇಲಾಖೆಯಲ್ಲಿ ಅತಿ ಹೆಚ್ಚು ದಾಖಲೆ ಇರುವ ಆಯ್ದ 100 ಉರ್ದು ಮಾಧ್ಯಮದ ಶಾಲೆಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆ, ಮಾದರಿಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿ, ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಕ್ರಮ ವಹಿಸಿ, ಮೌಲಾನ ಆಜಾದ್ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಒಟ್ಟರೆ 400 ಕೋಟಿ ವೆಚ್ಚ ಉಂಟಾಗಲಿದೆ. ಈ ಯೋಜನೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಅನುದಾನ ಕನ್ನಡ ಮಾಧ್ಯಮದ ಶಾಲೆಗಳ ಅನುದಾನಕ್ಕಿಂತ ಹೆಚ್ಚಾಗಿ ಇಲ್ಲ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ. ಇದನ್ನೇ ಬಳಸಿಕೊಂಡು ಸಾಕಷ್ಟು ಮಂದಿ ಉರ್ದು ಭಾಷೆಯ ಅಭಿವೃದ್ಧಿಗೆ 100 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎನ್ನುತ್ತಿದ್ದಾರೆ. ಆದರೆ ಇದು ಉರ್ದು ಭಾಷೆಯ ಅಭಿವೃದ್ಧಿಗಾಗಿ ಅಲ್ಲ ಬದಲಾಗಿ ಉರ್ದು ಶಾಲೆಯ ಅಭಿವೃದ್ಧಿಗಾಗಿ ಎಂಬುದು ಸ್ಪಷ್ಟವಾಗಿದೆ. ಇದು ಕನ್ನಡ ಮಾಧ್ಯಮ ಶಾಲೆಗಳ ಅನುದಾನಕ್ಕಿಂತಲೂ ಕಡಿಮೆ ಇದೆ ಎಂಬುದು ಕೂಡ ಅಂಕಿ ಅಂಶಗಳ ಮೂಲಕ ಸ್ಪಷ್ಟವಾಗಿ ತಿಳಿದು ಬಂದಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಎಕ್ಸ್ ಖಾತೆಯಲ್ಲಿ ʼಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಉರ್ದು ಭಾಷೆಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ರಾಜ್ಯ @BJP4Karnataka ಮಾಡುತ್ತಿರುವ ಅಪಪ್ರಚಾರ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಕೋಮುವೈಷಮ್ಯ ಹುಟ್ಟಿಸುವ ದುರುದ್ದೇಶದಿಂದ ಕೂಡಿದ್ದಾಗಿದೆ. ಒಂದು ರಾಷ್ಟ್ರೀಯ ಪಕ್ಷ ಇಷ್ಟೊಂದು ಬೇಜವಾಬ್ದಾರಿತನದಿಂದ ಕಿಡಿಗೇಡಿ ಟ್ರೋಲರ್ ಗಳ ರೀತಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿರುವುದು ವಿಷಾದನೀಯ. 2025-26ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಗೆ ₹34,438 ಕೋಟಿ ಮತ್ತು ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳಿಗೆ ಸೇರಿದ ಶಾಲೆಗಳಿಗೆ ₹4,150 ಕೋಟಿ ಹೀಗೆ ಕನ್ನಡ ಭಾಷೆಯ ಶಾಲೆಗಳಿಗಾಗಿಯೇ ರಾಜ್ಯ ಸರ್ಕಾರ ಒಟ್ಟು 38,688 ಕೋಟಿ ರೂ.ಗಳನ್ನು ನೀಡಿದೆ. ಇದರ ಜೊತೆಯಲ್ಲಿ ಸರ್ಕಾರಿ ಶಾಲೆಗಳ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಒಟ್ಟು 999.30 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಈ ಒಟ್ಟು ಅನುದಾನ ಕನ್ನಡ ಭಾಷೆಯ ಅಭಿವೃದ್ದಿಗಾಗಿಯೇ ವ್ಯಯವಾಗಲಿದೆ. ಹೀಗಿರುವಾಗ ಕನ್ನಡ ಭಾಷೆಗೆ ರಾಜ್ಯ ಸರ್ಕಾರ ಕೇವಲ 32 ಕೋಟಿ ರೂಪಾಯಿ ಅನುದಾನ ನೀಡುತ್ತಿದೆ ಎಂಬ ಮಾಹಿತಿಯ ಪ್ರಸಾರದ ಹಿಂದೆ ರಾಜಕೀಯ ದುರುದ್ದೇಶ ಇರುವುದು ಸ್ಪಷ್ಟವಾಗುತ್ತದೆ. ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಇರುವ ರಾಜ್ಯದ ಉರ್ದು ಮಾಧ್ಯಮ ಶಾಲೆಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಮೂಲಸೌಕರ್ಯಗಳನ್ನು ಒದಗಿಸಿ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುವ ಹಾಗೂ ಮೌಲಾನ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸುವ ಉದ್ದೇಶದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ 100 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತ ಇಲಾಖೆಯಡಿ ಒದಗಿಸಲಾಗಿದೆ. ಈ ಅನುದಾನವನ್ನು ಕೇವಲ ಭಾಷಾ ಕಲಿಕೆಗೆ ಮಾತ್ರವಲ್ಲ ಶಾಲಾ ಮೂಲಸೌಕರ್ಯ, ಶಿಕ್ಷಕರ ನೇಮಕಾತಿಗಾಗಿ, ಪಠ್ಯಪುಸ್ತಕಗಳು ಮತ್ತು ಹೊಸ ಶಾಲಾ ಕಟ್ಟಡಗಳ ನಿರ್ಮಾಣಕ್ಕೂ ಬಳಸಲಾಗುವುದು. ಕನ್ನಡ, ಉರ್ದು ಭಾಷೆಗಳು ಸೇರಿದಂತೆ ಯಾವುದೇ ಭಾಷೆಯನ್ನು ನಿರ್ದಿಷ್ಠ ಜಾತಿ, ಧರ್ಮದ ಜೊತೆ ಜೋಡಿಸುವುದು ಆ ಭಾಷೆಗಳಿಗೆ ತೋರುವ ಅಗೌರವವಾಗುತ್ತದೆ. ನಮ್ಮ ಸರ್ಕಾರ ರಾಜ್ಯದಲ್ಲಿ ಬಳಕೆಯಲ್ಲಿರುವ ಎಲ್ಲ ಭಾಷೆಗಳ ಬಗ್ಗೆ ಸಮಾನ ಕಾಳಜಿಯನ್ನು ಹೊಂದಿದೆ. ಇದೇ ಸದುದ್ದೇಶದಿಂದ ರಾಜ್ಯದಲ್ಲಿ ಬಳಕೆಯಲ್ಲಿರುವ ತುಳು, ಕೊಂಕಣಿ, ಅರೆಬಾಸೆ, ಕೊಡವ ಭಾಷೆಗಳಿಗಾಗಿಯೇ ಪ್ರತ್ಯೇಕ ಅಕಾಡೆಮಿಗಳನ್ನು ಸ್ಥಾಪಿಸಲಾಗಿದ್ದು, ಇವುಗಳಿಗೆ ವಾರ್ಷಿಕ 80 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಲಾಗುತ್ತದೆ. ಇದರ ಜೊತೆಗೆ ವಿಶೇಷ ಕಾರ್ಯಕ್ರಮಗಳಿಗಾಗಿ ಹೆಚ್ಚುವರಿ ಅನುದಾನವನ್ನು ನೀಡಲಾಗುತ್ತದೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿಯೇ ಪ್ರತ್ಯೇಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೆ. ಇದರಡಿಯಲ್ಲಿ 14 ಅಕಾಡೆಮಿಗಳು, 3 ಪ್ರಾಧಿಕಾರ ಮತ್ತು ಸಾಹಿತಿಗಳ ಹೆಸರಿನ 24 ಟ್ರಸ್ಟ್ ಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವೂ ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಮೀಸಲಾಗಿವೆ. ಕನ್ನಡ ಭಾಷೆಗೆ ಕನ್ನಡಿಗರೆಲ್ಲರೂ ತಾಯಿಯ ಸ್ಥಾನವನ್ನು ನೀಡಿದ್ದು ಇದೇ ಗೌರವವನ್ನು ನಮ್ಮ ಸರ್ಕಾರ ಕೂಡಾ ಹೊಂದಿದೆ. ನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎನ್ನುವುದನ್ನು ನಾನು ಪದೇ ಪದೇ ಹೇಳಿಕೊಂಡು ಬಂದಿದ್ದೇನೆ. ಇದೇ ರೀತಿ ನಾಡು-ನುಡಿಗೆ ಬಗೆವ ಅವಮಾನವನ್ನು ಕೂಡಾ ನಮ್ಮ ಸರ್ಕಾರ ಸಹಿಸುವುದಿಲ್ಲ. ಹೀಗಿರುವಾಗ ಕನ್ನಡ ಭಾಷೆಗಾಗಿ ಕೇವಲ 32 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ರಾಜ್ಯ ಬಿಜೆಪಿ ಹಂಚಿಕೊಂಡು ಜನರನ್ನು ತಪ್ಪು ದಾರಿಗೆಳೆಯುತ್ತಿರುವುದು ಅಕ್ಷಮ್ಯ ಅಪರಾಧ ಮಾತ್ರವಲ್ಲ ಕನ್ನಡ ನಾಡು ಮತ್ತು ನುಡಿಗೆ ಬಗೆವ ದ್ರೋಹವಾಗಿದೆ. ರಾಜ್ಯ ಬಿಜೆಪಿ ತಕ್ಷಣ ಸ್ಪಷ್ಟೀಕರಣದ ಮೂಲಕ ಸತ್ಯ ಸಂಗತಿಯನ್ನು ತಿಳಿಸುವ ಜೊತೆಯಲ್ಲಿ ತಮ್ಮಿಂದ ಆಗಿರುವ ತಪ್ಪಿಗೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ. #ಕನ್ನಡವೇಸಾರ್ವಭೌಮ #ಕನ್ನಡವೇಮೊದಲುʼ. ಈ ಒಟ್ಟು ಅನುದಾನ ಕನ್ನಡ ಭಾಷೆಯ ಅಭಿವೃದ್ದಿಗಾಗಿಯೇ ವ್ಯಯವಾಗಲಿದೆ. ಹೀಗಿರುವಾಗ ಕನ್ನಡ ಭಾಷೆಗೆ ರಾಜ್ಯ ಸರ್ಕಾರ ಕೇವಲ 32 ಕೋಟಿ ರೂಪಾಯಿ ಅನುದಾನ ನೀಡುತ್ತಿದೆ ಎಂಬ ಮಾಹಿತಿಯ ಪ್ರಸಾರದ ಹಿಂದೆ ರಾಜಕೀಯ ದುರುದ್ದೇಶ ಇರುವುದು ಸ್ಪಷ್ಟವಾಗುತ್ತದೆ” ಎಂದು ಬರೆದುಕೊಂಡಿದ್ದಾರೆ
ಇನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ಹಾಗೆ ಮತ್ತೊಂದು ಪೊಸ್ಟ್ನಲ್ಲಿ ʼಭಾಷೆಯ ಹೆಸರಿನಲ್ಲಿ ಸುಳ್ಳು ಮಾಹಿತಿ ಮತ್ತು ಕೋಮುದ್ವೇಷ ಹಂಚಿಕೆ : ಕರ್ನಾಟಕ ಸರಕಾರವು ಭಾಷಾವಾರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ವಿವರಿಸುವ, ಮತ್ತು ಆಯ್ದು ತೆಗೆದ ಕೆಲವು ಅಂಕಿ ಅಂಶಗಳನ್ನು ಮಾತ್ರ ಪ್ರಸ್ತುತಪಡಿಸುವ, ಯಾರದೇ ವ್ಯಕ್ತಿಯ ಅಥವಾ ಸಂಸ್ಥೆಯ ಹೆಸರಿಲ್ಲದ ಪೋಸ್ಟರೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂಥ ಸುಳ್ಳುಗಳನ್ನು ಹಂಚಿ, ಸಾಮಾಜಿಕ ಸಾಮರಸ್ಯವನ್ನು ಕೆಡಿಸುವ ಉದ್ದೇಶ ಈ ಪೋಸ್ಟರಿಗೆ ಇದ್ದಂತಿದೆ. ಕರ್ನಾಟಕ ರಾಜ್ಯ ಸರ್ಕಾರದ 2025-26ನೇ ಸಾಲಿನ ಆಯವ್ಯಯದಲ್ಲಿ, ಹಿಂದಿನ ವರ್ಷದ ಖರ್ಚು ಮತ್ತು ಪ್ರಸಕ್ತ ವರ್ಷದ ಬೇಡಿಕೆಯನ್ನು ಪರಿಶೀಲಿಸಿ ಈ ಕೆಳಗಿನಂತೆ ಹಣ ತೆಗೆದಿರಿಸಲಾಗಿದೆ. ಇದರಲ್ಲಿ ಕನ್ನಡಕ್ಕೆ ಸರ್ಕಾರವು ಮೊದಲ ಆದ್ಯತೆಯನ್ನು ನೀಡಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ: ( ಒಟ್ಟು ಬಜೆಟಿನ ಶೇಕಡಾ 11.07 , ಕಳೆದ ಬಾರಿಗಿಂತ 864 ಕೋಟಿ ಹೆಚ್ಚು)
೧. ಶಿಕ್ಷಣ : ರೂ. 45286 ಕೋಟಿ
೨. ಕನ್ನಡ ಮತ್ತು ಸಂಸ್ಕೃತಿ ( ಇದರಲ್ಲಿ ತುಳು, ಕೊಂಕಣಿ, ಕೊಡವ,
ಬ್ಯಾರಿ, ಅರೆಭಾಷೆಗಳೂ ಸೇರಿರುತ್ತವೆ ) : ರೂ. 274.80 ಕೋಟಿ
ಇವಲ್ಲದೆ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಹಿಂದೆ ಬಿಡುಗಡೆ ಮಾಡಲಾದ ಮೊತ್ತ
• ತುಳು ಸಾಹಿತ್ಯ ಅಕಾಡೆಮಿ ಕಟ್ಟಡಕ್ಕೆ ೩ ಕೋಟಿ,
• ಬ್ಯಾರಿ ಸಾಹಿತ್ಯ ಅಕಾಡೆಮಿ ಕಟ್ಟಡಕ್ಕೆ ೩ ಕೋಟಿ
• ಕೊಂಕಣಿ ಸಾಹಿತ್ಯ ಅಕಾಡೆಮಿ ಕಟ್ಟಡಕ್ಕೆ ೩ ಕೋಟಿ
ಅಲ್ಪಸಂಖ್ಯಾತ ಕಲ್ಯಾಣ: (ಇದರ ಅಡಿಯಲ್ಲಿ ಉರ್ದು ಭಾಷಾ ಅಕಾಡೆಮಿಗೆ ಎರಡು ಕೋಟಿ ತೆಗೆದಿರಿಸಲಾಗಿದೆ. ಉರ್ದು ಶಾಲೆಗಳ ಅಭಿವೃದ್ಧಿಗೆ ಸುಮಾರು ನೂರುಕೋಟಿ ತೆಗದಿರಿಸಿಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉರ್ದು ಶಾಲೆಗಳಲ್ಲಿ ಕನ್ನಡವನ್ನೂ ಕಲಿಸಲಾಗುತ್ತಿದೆ. ಅಲ್ಪ ಸಂಖ್ಯಾತ ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ ಮುಸಲ್ಮಾನರು, ಕ್ರೈಸ್ತರು, ಜೈನರು, ಬೌದ್ದರು ಮತ್ತು ಸಿಖ್ಖರು ಬರುತ್ತಾರೆ. ಇವರೆಲ್ಲರಿಗೂ ಸೇರಿ ಒಟ್ಟು : ರೂ. 4510 ಕೋಟಿ. ಸುಳ್ಳು ಪೋಸ್ಟರುಗಳನ್ನು ನಂಬದೆ, ಸತ್ಯಾಂಶವನ್ನು ತಿಳಿದುಕೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.ʼ ಎಂದು ಬರೆದಿರುವುದನ್ನು ನೋಡಬಹುದು
ಇದರಿಂದ ಸಾಭೀತಾಗಿದ್ದೇನೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ರಾಜ್ಯ ಸರ್ಕಾರ ಉರ್ದು ಭಾಷೆಯ ಅಭಿವೃದ್ಧಿಗಾಗಿ 100 ಕೋಟಿ ಅನುದಾನ ನೀಡಿದ್ದು, ಇತರೆ ಭಾಷೆಗಳ ಅಭಿವೃದ್ಧಿಗಾಗಿ ಕೇವಲ 32 ಕೋಟಿ ಅನುದಾನ ನೀಡಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಬಜೆಟ್ನ ಅಂಕಿ ಅಂಶಗಳ ಪ್ರಕಾರವಾಗಿ ರಾಜ್ಯ ಸರ್ಕಾರವು ಕನ್ನಡ ಮಾಧ್ಯಮ ಶಾಲೆಗಳಿಗೆ ಮತ್ತು ಉರ್ದು ಮಾಧ್ಯಮ ಶಾಲೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಸುಮಾರು 38,688 ಕೋಟಿ ಅನುದಾನ ನೀಡಿದ್ದು, ಅತಿ ಹೆಚ್ಚು ದಾಖಲಾತಿರುವ ಉರ್ದು ಶಾಲೆಗಳ ಅಭಿವೃದ್ಧಿಗಾಗಿ 100 ಕೋಟಿ ಅನುದಾನವನ್ನು ನೀಡಿದೆ.